Labels

Search :

Thursday, April 1, 2021

ಐದು ಕಾಲಿನ ಮಂಚ

 ಐದು ಕಾಲಿನ ಮಂಚ 

"ಐದು ಕಾಲಿನ ಮಂಚ ಕುಂಟ ಮಲಗಿದ್ದ" ಹತ್ತಾರು ರೀತಿಯಲ್ಲಿ ಅರ್ಥೈಸಿ

ಸಾಂದರ್ಭಿಕ ಚಿತ್ರ


ಕೊಳ್ಳಬಹುದಾದ ಅದ್ಭುತ ಪದ್ಯದ ರಚನೆಯನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮಾಡಿದ್ದು, ಈ ಪದ್ಯದ ಒಂದೊಂದು ಸಾಲಿಗೂ ಅರ್ಥವತ್ತಾದ ವಿವರಣೆಯನ್ನು ನೀಡಿದ್ದಾರೆ ಶ್ರೀನಾಥ್ ಭಲ್ಲೆ.



ಇತ್ತೀಚೆಗೆ ನಮ್ಮನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಅಗಲಿದರು. ವೇದೋಪನಿಷದ್ ಮತ್ತು ಪುರಾಣಗಳನ್ನು ಸಾಕಷ್ಟು ಅರ್ಥೈಸಿಕೊಂಡಿದ್ದೇ ಅಲ್ಲದೇ ಅದನ್ನು ಪ್ರಚಾರ ಕೂಡ ಮಾಡುತ್ತಲೇ ನಮ್ಮೊಂದಿಗೆ ಇದ್ದವರು, ಇಂದು ನಮ್ಮನ್ನು ಅಗಲಿದ್ದಾರೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ ಆದರೆ ಅವರ ಉಪದೇಶಾಮೃತ ನಮ್ಮೊಂದಿಗೇ ಸದಾ ಇರುತ್ತದೆ.


ಅವರು ಅಗಲಿದ ದಿನದಂದೇ, ಅವರು ರಚಿಸಿರುವ ಒಂದು ಅದ್ಭುತವಾದ ರಚನೆಯನ್ನು ಶ್ರೀ. ವಿದ್ಯಾಭೂಷಣರ ದನಿಯಲ್ಲಿ ಮತ್ತೆ ಕೇಳುವ ಯೋಗ ಒದಗಿ ಬಂತು. ಈ ಬಾರಿ ಕೇಳುವಾಗ ಅರ್ಥೈಸಿಕೊಳ್ಳುವ ಇರಾದೆಯೂ ಉಂಟಾಯಿತು. ಈ ಒಂದು ಕ್ರಿಯೆಯಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ಒಂದೊಂದೂ ಸಾಲನ್ನು ಹತ್ತು ಹಲವು ರೀತಿ ಅರ್ಥೈಸಿಕೊಳ್ಳಬಹುದು ಎಂದು. ಆದರೆ ಆಚಾರ್ಯರು ಇದನ್ನು ಯಾವ ಆಲೋಚನೆಯಿಂದ ರಚಿಸಿದ್ದಾರೆ ಎಂಬುದರ ಅರಿವು ನನಗಿಲ್ಲ.


ಸಾಹಿತ್ಯ ಹೀಗಿದೆ

ಐದು ಕಾಲಿನ ಮಂಚ ಕುಂಟ ಮಲಗಿದ್ದಾ,

ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ

ಇದ್ದೈದು ಕಾಲಿಗೂ ಕೈಕಾಲು ಬಂತು,

ಕುಂಟ ಮಲಗಿದ್ದಂತೆ ಮಂಚ ಧಾವಿಸಿತು

ಆರು ಜನ ದಾಂಡಿಗರು ಕೈಹಿಡಿದರೆಳೆದು,

ಜಾರಿ ಬಿದ್ದನೊ ಕುಂಟ ಪಕ್ಕೆಲುಬು ಮುರಿದು

ಏಳೈಯ್ಯ ಕುಂಟೈಯ್ಯ ದಂಟೆಹಿಡಿದೇಳು,

ಕೋಳಿ ಹಾಡುವ ಸುಪ್ರಭಾತವನು ಕೇಳು

ಈ ಐದು ಈ ಆರು ಈ ಮೂರು ಸಾಕು,

ಹದಿನೆಂಟು ಬೇಕೋ ಬಿಡಬೇಕು ಹದಿನಾಲ್ಕು.


ಈಗ ಒಂದೊಂದೂ ಸಾಲನ್ನು ನೋಡೋಣ ಬನ್ನಿ

ಐದು ಕಾಲಿನ ಮಂಚ ಕುಂಟ ಮಲಗಿದ್ದಾ

ಇಲ್ಲಿ ಮಂಚ ಎಂದರೆ ದೇಹ. ಪಂಚಭೂತಗಳನ್ನು ಹೊಂದಿರುವ ದೇಹ. ಪಂಚಭೂತಗಳನ್ನೇ ಕಾಲುಗಳನ್ನಾಗಿ ಉಳ್ಳ ದೇಹವೆಂಬ ಮಂಚ. ಅದರ ಮೇಲೆ ಒಬ್ಬ ಕುಂಟ ಮಲಗಿದ್ದ. ಇಲ್ಲಿ ಕುಂಟ ಎಂದರೆ ನಡೆಯಲಾರದವ ಅಂತಷ್ಟೇ. ಕಾಲು ಊನ ಆಗಿರಬೇಕು ಅಂತೇನಲ್ಲ. ಹೆಳವ ಎಂಬ ಅರ್ಥವಲ್ಲ. ಬದಲಿಗೆ ಕೂತಲ್ಲೇ ಕೂತಿರುವವ, ಮಲಗಿದ್ದಲ್ಲೇ ಮಲಗಿರುವವ ಅರ್ಥಾತ್ ಸೋಂಬೇರಿ.


ಒಡಹುಟ್ಟಿದವರೇ ದೋಸ್ತಿಗಳು.. ಬಸ್‌ ಏರಿ ಶಾಲೆಗೆ ಹೋಗಿ ಬರ್ತಿದ್ದ ಆ ದಿನಗಳನ್ನು ನೆನಪಿಸಿಕೊಳ್ಳಿ..!


ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ

ವಿಶೇಷಾರ್ಥದಲ್ಲಿ ಮೂರು ದಂಟೆಗಳು ಎಂದರೆ ಜ್ಞಾನ, ಭಕ್ತಿ, ವೈರಾಗ್ಯ. ಈ ಮೂರನ್ನು ಬದಿಗೆ ಇರಿಸಿ ಆ ಕುಂಟ ಮಲಗಿದ್ದ ಎಂದರೆ ಈ ಮೂರರ ಬಗ್ಗೆ ಲಕ್ಷ್ಯವೇ ತೋರದೆ, ಆಸಕ್ತಿಯನ್ನೇ ಹೊಂದದೇ ತನ್ನಷ್ಟಕ್ಕೆ ತಾನು ಮಲಗಿದ್ದ. ಜ್ಞಾನ, ಭಕ್ತಿ, ವೈರಾಗ್ಯಗಳ ಬಗ್ಗೆ ಅರಿವಿಲ್ಲದೆ ಮಲಗಿರಬಹುದು ಅಥವಾ ಇದೆಲ್ಲಾ ತನಗಲ್ಲ ಎಂದು ಮಲಗಿರಬಹುದು. ಕೆಲವೊಮ್ಮೆ ನಮ್ಮಲ್ಲೇ ಜನ ಹೇಳುತ್ತಾರೆ ನೋಡಿ, "ಓ ಭಗವದ್ಗೀತೆ’ಯಾ? ಅದು ಬರೀ ವಯಸ್ಸಾದವರಿಗೆ" ಅಂತ, ಹಾಗೆ.


ಸಾಮಾನ್ಯವಾದ ಅರ್ಥದಲ್ಲಿ ಮೂರು ದಂಟೆಗಳನ್ನು ನಾಚಿಕೆ, ಮಾನ, ಮರ್ಯಾದೆ ಎನ್ನಬಹುದು. ಕೆಲವೊಮ್ಮೆ ಎಂಥಾ ಜಡ ಆಲಸ್ಯ ಎಂದರೆ ಉಂಡು ಮಲಗೋದು ಬಿಟ್ಟರೆ ಬೇರೊಂದು ಕೆಲಸ ಗೊತ್ತಿಲ್ಲ ಎಂಬಂತೆ. ಯಾರೇ ಅನ್ನಲಿ, ಕೂಗಾಡಲಿ ಊರೇ ಹೋರಾಡಲಿ ಇವರ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಜೀವನ.


ಇದ್ದೈದು ಕಾಲಿಗೂ ಕೈಕಾಲು ಬಂತು,

ಇಲ್ಲಿನ ಐದು ಎಂದರೆ ಪಂಚೇಂದ್ರಿಯಗಳು ಅಂತರ್ಥ. ಎಲ್ಲ ಐದಕ್ಕೂ ಕೈಕಾಲು ಬಂತು ಎಂದರೆ ಆಚೀಚೆ ಹೋಗುವ ಅಥವಾ ನೋಡುವ ಒಂದು ಬುದ್ದಿ. ಅದು ಬೇಕು, ಇದು ಬೇಕು, ತಾನು ,ತನ್ನದು ಎಂಬೆಲ್ಲಾ ಭಾವಗಳು. ನಡೆದಾಡುವ ದೇಹಕ್ಕೆ ಮಾತ್ರ ಬಯಕೆಗಳು ಅಲ್ಲ ತಾನೇ? ಸುಮ್ಮನೆ ಬಿದ್ದುಕೊಂಡಿರುವ ದೇಹಕ್ಕೂ ಬಯಕೆಗಳು ಇದ್ದೇ ಇರುತ್ತವೆ.


ಕುಂಟ ಮಲಗಿದ್ದಂತೆ ಮಂಚ ಧಾವಿಸಿತು

ಅಂಥಾ ಬಯಕೆಗಳನ್ನು ಹೊತ್ತ ದೇಹ ಧಾವಿಸಿತು. ಬಯಕೆಗಳತ್ತ ಪಯಣ ಬೆಳೆಸಿದವು ಎಂದು ಅರ್ಥೈಸಿಕೊಳ್ಳಬಹುದು. ಅಥವಾ ಇಂಥಾ ಬಯಕೆಗಳಲ್ಲೇ ಯಾನ ಮಾಡುತ್ತಾ ದೇಹ ವಯಸ್ಸಿನೊಂದಿಗೆ ಮುಂದೆ ಮುಂದೆ ಸಾಗುತ್ತಿತ್ತು ಎನ್ನಬಹುದು.


ಕಚಗುಳಿ ಇಡುವಂಥ ನೆನಪುಗಳನ್ನು ತರುವ ಶಾಲೆಯ ದಿನಗಳು..! ನಿಮಗೆ ನೆನಪಿವೆಯೆ?


ಆರು ಜನ ದಾಂಡಿಗರು ಕೈಹಿಡಿದರೆಳೆದು

ಬಯಕೆಗಳತ್ತ ಮೊಗತೋರಿ ತೋರಿ ಧಾವಿಸುತ್ತಿರಲು ಅರಿಷಡ್ವರ್ಗಗಳೂ ಕೂಡಿಕೊಂಡು ಆರುದಿಕ್ಕಿನಲ್ಲಿ ಎಳೆದಾಡ ತೊಡಗಿತ್ತು. ಯಾವಾಗ ಬಯಕೆಗಳು ಎಂಬುದು ಆವರಿಸುತ್ತದೋ ಅಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ. ಮತ್ಸರ, ಲೋಭ, ಮೋಹಗಳಿಗೆ ಮನೆಯನ್ನೇ ಕಟ್ಟಿದಂತೆ. ಈ ಆರರಲ್ಲಿ ಒಬ್ಬರು ಕೈಹಿಡಿದು ತಮ್ಮತ್ತ ಸೆಳೆದರೂ ವಿನಾಶವೇ ಎಂದಾಗ, ಆರೂ ಜನ ಕೈಹಿಡಿದು ತಮ್ಮತ್ತ ಸೆಳೆದುಕೊಳ್ಳತೊಡಗಿದರು ಎಂದರೆ ಆ ದೇಹ ಹೈರಾಣವೇ ಸರಿ.


ಜಾರಿ ಬಿದ್ದನೊ ಕುಂಟ ಪಕ್ಕೆಲುಬು ಮುರಿದು

ಇಷ್ಟೆಲ್ಲಾ ಆದಾಗ, ಒಂದು ದೇಹ ಇನ್ನೆಷ್ಟೇ ಮೇಲಿದ್ದರೂ ಕೆಳಕ್ಕೆ ಉರುಳಿ ಪಕ್ಕೆಲುಬು ಮುರಿದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಒಬ್ಬರ ಅವನತಿಗೆ ಒಂದು 'ಅರಿ' (ಶತ್ರು) ಸಾಕು, ಆರೂ ಜನ ಬೇಕಿಲ್ಲ. ಅರಿಯನ್ನು ಅರಿತು ಎಚ್ಚರಿಕೆಯಿಂದ ಮುನ್ನೆಡೆವವ ಬಾಳುತ್ತಾನೆ.

ಕನ್ನಡ ಭಾಷೆಯ ಸೊಗಸೇ ಸೊಗಸು - ಭಾಗ 2: ವ್ಯಾಕರಣದಲ್ಲಿ ಅಡಗಿದೆ ಗಣಿತ, ವಿಜ್ಞಾನ..!


ಏಳೈಯ್ಯ ಕುಂಟೈಯ್ಯ ದಂಟೆಹಿಡಿದೇಳು

ಈಗ ಬಿದ್ದಾಯಿತಲ್ಲಾ, ಈಗಲಾದರೂ ಎಚ್ಚೆತ್ತುಕೊಂಡು ಎದ್ದು ನಿಲ್ಲು. ಅರಿವನ್ನು ಮೂಡಿಸಿಕೊಂಡು ಮೂರು ಗಂಟೆಗಳನ್ನು ಹಿಡಿ. ಕನಿಷ್ಠ ಎಂದರೆ ನಾಚಿಕೆ, ಮಾನ, ಮರ್ಯಾದೆ ಹೊಂದುವವನಾಗು. ಅಲ್ಲಿಂದ ಪೂರ್ಣವಾಗಿ ಎಚ್ಚರಗೊಂಡು ಜ್ಞಾನ, ಭಕ್ತಿ, ವೈರಾಗ್ಯದತ್ತ ಸಾಗು. ಅಹೋರಾತ್ರಿಯಲಿ ವೈರಾಗ್ಯ ತಾಳಿ ದೈವದತ್ತ ನಡೆಯಲು ನಾವೇನು ಬುದ್ದನೇ? ಅಥವಾ ದಾಸರೇ? ಅದು ಅಷ್ಟು ಸುಲಭ ಸಾಧ್ಯವಲ್ಲ.


ಕೋಳಿ ಹಾಡುವ ಸುಪ್ರಭಾತವನು ಕೇಳು

ಎಚ್ಚೆತ್ತುಕೊಂಡವನಿಗೆ ಹಗಲು ಎಂದರೇನು, ಕೋಳಿ ಎಂದರೇನು, ಕೋಳಿ ಕೂಗುವುದು ಎಂದರೇನು ಎಂಬ ಅರಿವು ಇರುತ್ತದೆ. ಬಿಸಿಲು ನೆತ್ತಿಗೇರಿದಾಗ ಎದ್ದವಗೆ ಇದರ ಅರಿವು ಇರುವುದಿಲ್ಲ. ಒಂದರ್ಥದಲ್ಲಿ ಕೋಳಿ ಎಂಬುದು ಆರಂಭದ ಸಂಕೇತ. ಬಾಳಲ್ಲಿ ಬೆಳಕು ಮೂಡಿಸಿಕೊಂಡು, ಜ್ಞಾನಜ್ಯೋತಿಯ ಬೆಳಗಿಸಿಕೊಂಡು, ಅರಿವಿನ ದೀಪ ಉರಿಸಿಕೊಂಡು ದಿನವನ್ನು ಆರಂಭಿಸು ಎನ್ನುವುದಾಗಿಯೂ ಅರ್ಥೈಸಿಕೊಳ್ಳಬಹುದು.



ಈ ಐದು ಈ ಆರು ಈ ಮೂರು ಸಾಕು

ಇಲ್ಲಿ ಸಾಕು ಎಂಬುದನ್ನು ಎರಡು ರೀತಿ ಅರ್ಥೈಸಿಕೊಳ್ಳಬಹುದು. ಒಂದು 'ಸಾಕು' ಎಂದರೆ ಸಾಕಪ್ಪಾ ಇದರ ಸಹವಾಸ ಅಂತ. ಹಾಗಿದ್ದಾಗ ಈ ಐದು, ಆರು, ಮೂರು ಎಂದರೇನು? ಮತ್ತೊಂದು ಅರ್ಥದಲ್ಲಿ ಹೇಳಿದರೆ 'ಸಾಕು' ಎಂದರೆ ಇಷ್ಟು 'ಸಾಕು' ಇನ್ನೇನೂ ಬೇಡಾ ಅಂತ. ಹಾಗಿದ್ದಾಗ ಈ ಐದು, ಆರು, ಮೂರು ಎಂದರೇನು? ಪಂಚಭೂತಗಳು ನಮ್ಮೊಂದಿಗಿರಲು, ಸ್ನೇಹಮಯಿ ಷಡ್ವರ್ಗಗಳು ನಮ್ಮೊಂದಿಗಿರಲು, ಜ್ಞಾನ, ವೈರಾಗ್ಯ, ಭಕ್ತಿಗಳೆಂಬ ದಂಟೆಗಳನ್ನು ಬದಿಗಿರಿಸದೆ ಕೈಲಿ ಪಿಡಿಯಲು ಸಾಧಿಸಬಹುದು ಹದಿನೆಂಟು, ಆದರೆ ಬಿಡಬೇಕು ಹದಿನಾಲ್ಕು. ಆರು ಎಂದರೆ ಪಂಚೇಂದ್ರಿಯಗಳು ಐದು ಜೊತೆಗೆ ಮೆದುಳು ಎಂಬುದೇ ಸ್ನೇಹಮಯಿ ಷಡ್ವರ್ಗಗಳು.

Perception ಎಂದರೆ ಗ್ರಹಿಕೆ ಅಷ್ಟೇ ನಿಜವೇ ಆಗಿರಬೇಕಿಲ್ಲ: ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು!


ಹದಿನೆಂಟು ಬೇಕೋ ಬಿಡಬೇಕು ಹದಿನಾಲ್ಕು

ಆರಕ್ಕೆ ಎಂಟು ಸೇರಿಸಿದಾಗ ಹದಿನಾಲ್ಕು ಆಗುತ್ತದೆ. ಆರು ಎಂದರೆ ಅರಿಷಡ್ವರ್ಗಗಳು. ಇದಕ್ಕೆ ಎಂಟು ಮದಗಳನ್ನು ಸೇರಿಸಿದರೆ?

ರೂಪ, ಯೌವ್ವನ, ಅಧಿಕಾರ ಇತ್ಯಾದಿ ಅಷ್ಟ ಮದಗಳನ್ನು ಸೇರಿದ ಹದಿನಾಲ್ಕನ್ನು ಬಿಡಬೇಕು ಆಗಲೇ ಸಿಗುವುದು ಹದಿನೆಂಟು. ಈ ಹದಿನೆಂಟು ಎಂದರೆ ಹದಿನೆಂಟು ಅಧ್ಯಾಯಗಳ ಭಗವದ್ಗೀತೆ. ಹದಿನೆಂಟು ಎಂದರೆ ಜಯ ಅರ್ಥಾತ್ ಹದಿನೆಂಟು ಪರ್ವಗಳ ಜಯ ಅಥವಾ ಮಹಾಭಾರತ. ಇಂಥಾ ಪವಿತ್ರವಾದ ಹದಿನೆಂಟನ್ನು ಸಾಧಿಸಲು ಹದಿನಾಲ್ಕನ್ನು ಬಿಡಲೇಬೇಕು.

ಐದು ಕಾಲಿನ ಮಂಚ ಕುಂಟ ಮಲಗಿದ್ದ; ಬನ್ನಂಜೆಯವರ ಅಪರೂಪದ ಪದ್ಯವಿದು..!

ನನಗಿರುವ ಜ್ಞಾನದಿಂದ ಈ ಒಂದು ಯತ್ನ ನಡೆಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ.


 ಶ್ರೀನಾಥ್ ಭಲ್ಲೆ 

No comments:

Post a Comment

Related Posts Plugin for WordPress, Blogger...
Related Posts Plugin for WordPress, Blogger...

Search More....

2014-2015-2016